ದಾವಣಗೆರೆ ಮಹಾನಗರಪಾಲಿಕೆ ಕಸ ಸಂಗ್ರಹಣಾ ವಾಹನಗಳಿಗೆ ಇನ್ನುಮುಂದೆ ಜಿಪಿಆರ್.ಎಸ್ ಅಳವಡಿಕೆ ; ಜಿಲ್ಲಾಧಿಕಾರಿಯಿಂದ ಚಾಲನೆ
Kadamabakesari.com

ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆಯ ತ್ಯಾಜ್ಯ ನಿರ್ವಹಣೆ ಕುರಿತಂತೆ ಕಸ ಸಂಗ್ರಹಣಾ ವಾಹನಗಳಿಗೆ ಜಿಪಿಆರ್ ಎಸ್ ಯಂತ್ರಗಳನ್ನು ಅಳವಡಿಸಲಾಗಿದೆ. ಯಾವುದೇ ವಾಹನ ಎಲ್ಲಿದೆ ಎನ್ನುವ ಮಾರ್ಗ ತಿಳಿಯಲಿದೆ. ಯಾವುದೇ ಕಾರಣಕ್ಕೂ ಪಾಲಿಕೆಯ ಸಂಬಂಧಿಸಿದ ಅಧಿಕಾರಿಗಳಾಗಲೀ, ಸಿಬ್ಬಂದಿಗಳಾಗಲೀ, ಪೌರ ಕಾರ್ಮಿಕರಾಗಲೀ ತಮ್ಮ ಕರ್ತವ್ಯದಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ ಎಂದು ದಾವಣಗೆರೆ ಸ್ಮಾರ್ಟ್ ಸಿಟಿ ಲಿಮಿಟೆಡಿನ ಮಾಹಿತಿ ತಂತ್ರಜ್ಞಾನ ವಿಭಾಗದ ಉಪ ಪ್ರಧಾನ ವ್ಯವಸ್ಥಾಪಕ ರಾದ ಜಿ.ಆರ್.ಮಮತ ತಿಳಿಸಿದರು.
ನಗರದ ಶ್ರೀ ದುರ್ಗಾಶಕ್ತಿ ಮಹಿಳಾ ಸ್ವಸಹಾಯ ಸಂಘದಿಂದ ಗಾಜಿನ ತ್ಯಾಜ್ಯ ಮತ್ತು ಒಣ ತ್ಯಾಜ್ಯ ಘಟಕದ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದಾವಣಗೆರೆ ಮಹಾ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಇರುವ ಒಟ್ಟು ಕುಟುಂಬ, ಜನಸಂಖ್ಯೆ, ಉತ್ಪತ್ತಿ ಆಗುವ ತ್ಯಾಜ್ಯದ ಪ್ರಮಾಣ, ತ್ಯಾಜ್ಯ ಸಂಗ್ರಹದ ಪ್ರಮಾಣಕ್ಕೆ ತಕ್ಕಂತೆ ವಾಹನ, ಕಸ ಸಂಗ್ರಹಣೆ ಪೌರ ಕಾರ್ಮಿಕರನ್ನು ನೇಮಿಸಲಾಗಿದೆ. ಅಲ್ಲದೇ ವಾಹನಗಳಿಗೆ ಮಾರ್ಗದ ನಕ್ಷೆ ರಚಿಸಲಾಗುತ್ತಿದೆ. ಯಾವುದೇ ಕಾರಣದಿಂದಾಗಿ ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಹಾಕುವಂತಿಲ್ಲ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟನೆ ಮಾಡಿದ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಮಾತನಾಡಿ, ಸರ್ಕಾರದಿಂದ ಯಾವುದೇ ಅನುದಾನ ಪಡೆಯದೇ ಮಹಿಳಾ ಸ್ವಸಹಾಯ ಸಂಘವು ತ್ಯಾಜ್ಯ ನಿರ್ವಹಣೆ ಮಾಡಲು ಮುಂದಾಗಿದೆ. ಇದು ಶ್ಲಾಘನೀಯ ಕಾರ್ಯ. ಇಂತಹ ಕಾರ್ಯಗಳಿಗೆ ಸಾರ್ವಜನಿಕ ಸಹಭಾಗಿತ್ವದ ಮಹಿಳಾ ಸಂಘಗಳು ಮುಂದಾಗಬೇಕೆಂದು ಕರೆ ನೀಡಿದರು.
ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ ಮಾತನಾಡಿ, ಮರುಬಳಕೆ ಮಾಡಬಹುದಾದ ಜೈವಿಕ ವಿಘಟನೀಯ ತ್ಯಾಜ್ಯವನ್ನು ಒಣ ತ್ಯಾಜ್ಯ ಸಂಗ್ರಹ ಕೇಂದ್ರಗಳಿಗೆ, ಒಣ ತ್ಯಾಜ್ಯವನ್ನು ವಿಂಗಡಿಸಿ, ಮರುಪಡೆಯುವಿಕೆ ಸೌಲಭ್ಯಗಳಿಗೆ ಕಳುಹಿಸಲಾಗುತ್ತದೆ. ನಂತರ ಅಲ್ಲಿಂದ ಅದನ್ನು ಅಧಿಕೃತ ಮರುಬಳಕೆ ಘಟಕಗಳಿಗೆ ಕಳುಹಿಸಲಾಗುತ್ತದೆ. ಇಂತಹ ಕಾರ್ಯಗಳಿಗೆ ಸಾರ್ವಜನಿಕರ ಸಹಭಾಗಿತ್ವ ಅಗತ್ಯ ಎಂದು ಮಾಹಿತಿ ನೀಡಿದರು.
ದಾವಣಗೆರೆ ಸ್ಮಾರ್ಟ್ ಸಿಟಿ ಲಿಮಿಟೆಡಿನ ವೀರೇಶ್ ಕುಮಾರ್ ಮಾತನಾಡಿ, ತ್ಯಾಜ್ಯ ಕಸ ಸಂಗ್ರಹಣೆಗೆ ಹಲವಾರು ನಿಯಮಗಳಿದ್ದು, ಸಾರ್ವಜನಿಕರ ಸಹಭಾಗಿತ್ವದಲ್ಲಿ ಕಸ ಸಂಗ್ರಹಣೆಗೆ ಮುಂದಾಗಬೇಕೆಂದು ಕರೆ ನೀಡಿದರು.
ಈ ವೇಳೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ರಾಜಶೇಖರ ಬಿ.ಪುರಾಣಿಕ, ಪರಿಸರ ಅಭಿಯಂತರ ಜಗದೀಶ್, ಮಾತೃದೇವೋ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಪೋತುಲ ಶ್ರೀನಿವಾಸ್, ಒಣ ಕಸ ಮರು ಸಂಗ್ರಹಣಾ ಘಟಕದ ಸಂಯೋಜಕ ನವೀನ ಗುಬ್ಬಿ, ಕೆ.ಎನ್.ಪ್ರಜ್ವಲ್, ನಂದಾಮಣಿ, ರೇಖಾ, ಡಿ.ಸಾವಿತ್ರಮ್ಮ, ಡಿ.ಅರ್.ಚೇತನಾ ಇತರರು ಇದ್ದರು.