
ಚಿತ್ರದುರ್ಗ:
ಕರೋನ ನಿಯಂತ್ರಣ ಸಂದರ್ಭದಲ್ಲಿ ರಚಿಸಿದಂತೆ ಪ್ರತಿ ವಾರ್ಡ್ಗಳಿಗೆ ಕ್ಷಿಪ್ರ ನಿಗಾವಣೆ ತಂಡ ರಚಿಸಿ, ಡೆಂಗ್ಯೂ ನಿಯಂತ್ರಣಕ್ಕೆ ಕ್ರಮಜರುಗಿಸಬೇಕು ಎಂದು ಚಿತ್ರದುರ್ಗ ನಗರಸಭೆ ಪೌರಾಯುಕ್ತೆ ಎಂ.ರೇಣುಕಾ ಹೇಳಿದರು.
ಇಲ್ಲಿನ ನಗರಸಭೆ ಕೌನ್ಸಿಲ್ ಸಭಾಂಗಣದಲ್ಲಿ ಮಂಗಳವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ನಗರಸಭೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ನಗರದಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ವಾರ್ಡ್ವಾರು ಆಶಾ ಕಾರ್ಯಕರ್ತೆಯರು, ನಗರ ಆರೋಗ್ಯ ಕೇಂದ್ರಗಳ ಆರೋಗ್ಯ ನಿರೀಕ್ಷಣಾಧಿಕಾರಿಗಳು, ನೀರುಗಂಟಿಯವರು, ನಗರಸಭೆ ಸಿಬ್ಬಂದಿ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಧಿಕಾರಿ, ಸಿಬ್ಬಂದಿಗಳು ತಮಗೆ ನೀಡಿದ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಮುಖ್ಯವಾಗಿ ಸೊಳ್ಳೆಗಳ ಉತ್ಪತ್ತಿ ತಾಣ ನಾಶ ಮಾಡುವ ಜತೆಗೆ ಜನರಿಗೆ ಅರಿವು ಮೂಡಿಸುವ ಕೆಲಸವಾಗಬೇಕು ಎಂದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಮಾತನಾಡಿ. ಲಾರ್ವಾ ಸಮೀಕ್ಷೆ ಗುಣಮಟ್ಟದಲ್ಲಿ ಮಾಡಿ. ಲಾರ್ವಾ ಸಾಂದ್ರತೆ ಪ್ರಮಾಣ ೧೦೦ ಮನೆಗೆ ೧೦ ಮನೆಗಳಲ್ಲಿ ಕಂಡು ಬಂದಿದ್ದು, ಈ ಪ್ರಮಾಣ ಕಡಿಮೆಯಾಗಬೇಕು. ಅಬೇಟ್ ದ್ರಾವಣ ಸರಿಯಾದ ಪ್ರಮಾಣದಲ್ಲಿ ಹಾಕಿ ಸೊಳ್ಳೆಗಳ ಉತ್ಪತ್ತಿಯಾಗದಂತೆ ಗಮನಹರಿಸಬೇಕು ಎಂದು ಹೇಳಿದರು.
ಜಿಲ್ಲಾ ಕೀಟ ಶಾಸ್ತ್ರಜ್ಞೆ ನಂದಿನಿ ಕಡಿ ಮಾತನಾಡಿ, ಜಿಲ್ಲೆಯಾದ್ಯಂತ ಈವರೆಗೂ ೪೩೦ ಪ್ರಕರಣಗಳು ಕಂಡುಬಂದಿದ್ದು, ಚಿತ್ರದುರ್ಗ ನಗರದಲ್ಲಿ ೧೧೧ ಪ್ರಕರಣಗಳು ಇವೆ. ಸೊಳ್ಳೆಗಳ ತಾಣಗಳೆಂದು ಪಂಚರ್ ಶಾಪ್, ಗುಜರಿ ಅಂಗಡಿಗಳು, ಬಸ್ ನಿಲ್ದಾಣ, ಬಸ್ಡಿಪೋ, ಖಾಲಿ ನಿವೇಶನ, ಟೀ ಅಂಗಡಿ ಈ ಪ್ರದೇಶದಲ್ಲಿ ಹೆಚ್ಚಿನ ಗಮನಹರಿಸಿ. ನಗರದಲ್ಲಿ ೧೨ ಹಾಟ್ಸ್ಪಾಟ್ ಗುರುತಿಸಲಾಗಿದೆ. ಮನೆ ಮನೆ ಭೇಟಿ, ಜ್ವರ, ಲಾರ್ವಾ ಸಮೀಕ್ಷೆ ಬೆಳಿಗ್ಗೆ ೭ ಗಂಟೆಯಿಂದ ಪ್ರಾರಂಭ ಮಾಡಿ, ಹಾಟ್ಸ್ಪಾಟ್ ಪ್ರದೇಶದ ಪ್ರಕರಣದ ಮನೆಯ ಸುತ್ತ ೧೦೦ ಮೀಟರ್ ವ್ಯಾಪ್ತಿಯಲ್ಲಿ ಬರುವ ಮನೆಗಳಿಗೆ ಒಳಾಂಗಣ ಧೂಮಲೀಕರಣ ಮಾಡಿಸಿ ಎಂದರು.
ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ಮಾತನಾಡಿ, ಸಾರ್ವಜನಿಕರಿಗೆ ಅರಿವು ಮೂಡಿಸಲು ಕಸದ ವಾಹನಗಳಲ್ಲಿ ಧ್ವನಿ ವರ್ದಕಗಳ ಮೂಲಕ ಪ್ರಸಾರ ಮಾಡಿ ಗುಂಪು ಸಭೆ, ತಾಯಂದಿರ ಸಭೆ, ಸಮುದಾಯ ಸಭೆ, ಕರಪತ್ರ ವಿತರಣೆ, ಶಾಲಾ ಅಂಗನವಾಡಿಗಳ ಸುತ್ತ-ಮುತ್ತ ಸ್ವಚ್ಛತಾ ಕಾರ್ಯಕ್ರಮ ಆಯೋಜಿಸಿ ಜಾಗೃತಿ ಜಾಥಾ ಮಾಡಿಸಿ ಎಂದರು.
ಸಾರ್ವಜನಿಕರಿಗೆ ಸಹಾಯಕ್ಕಾಗಿ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಸಹಾಯವಾಣಿ ರಚಿಸಿ ಆರೋಗ್ಯ ಇಲಾಖೆಯ ಆರೋಗ್ಯ ನಿರೀಕ್ಷಣಾಧಿಕಾರಿ ರಂಗಾರೆಡ್ಡಿ ನಿಯೋಜಿಸಲಾಗಿದೆ. ಡೆಂಗ್ಯೂ ವಾರ್ ರೂಂ ಸಹಾಯವಾಣಿ ಸಂಖ್ಯೆ ೭೪೧೧೬೩೩೩೬೫ ಸ್ಥಾಪಿಸಲಾಗಿದ್ದು, ಕುಂದು ಕೊರತೆಗಳ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಬಿ.ಮೂಗಪ್ಪ, ಬಿ.ಜಾನಕಿ, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಸರಳಾ, ನಾಗರಾಜ್, ಗುರುಮೂರ್ತಿ, ನಂದೀಶ್, ಗೋಪಾಲಕೃ?, ಪ್ರವೀಣ್, ಮಹಿಳಾ ಮತ್ತು ಮಕ್ಕಳ ಇಲಾಖೆಯ ಮಂಜುಳಾ, ನಗರಸಭೆ ಪರಿಸರ ಇಂಜಿನಿಯರ್ ಜಾಫರ್, ಆಶಾ ಕಾರ್ಯಕರ್ತೆಯರು, ನಗರಸಭಾ ಸಿಬ್ಬಂದಿ ಇದ್ದರು.