
ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿಗಳಿಗೆ ತಮ್ಮ ಕ್ಷೇತ್ರದಲ್ಲಿ ಲೀಡ್ ಕೊಡಿಸಲು ಸಾಧ್ಯವಾಗದೆ ಇರುವ ಸಚಿವರು ರಾಜೀನಾಮೆ ಕೊಡಬೇಕು ಎಂದು ಕಾಂಗ್ರೆಸ್ ಶಾಸಕ ಬಸವರಾಜ್ ಶಿವಗಂಗಾ ಹೇಳಿಕೆಗೆ ತಿರುಗೇಟು ನೀಡಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಶಾಸಕರು ಬಾಯಿ ಮುಚ್ಚುಕೊಂಡು ಇದ್ದರೆ ಒಳ್ಳೆಯದು ಎಂಬ ಎಚ್ಚರಿಕೆ ನೀಡಿದ್ದಾರೆ.ಚುನಾವಣೆಯಲ್ಲಿ ನಮಗೆ 14 ರಿಂದ 15 ಸ್ಥಾನ ಬರುತ್ತವೆ ಎಂಬ ನಂಬಿಕೆ ಇತ್ತು. ಆದರೆ ಅಷ್ಟು ಬಂದಿಲ್ಲ, ನಾವು ವಿಫಲವಾಗಿದ್ದೇವೆ. ಇದನ್ನು ನಾವು ಒಪ್ಪಿಕೊಳ್ಳಲೇಬೇಕು. ನನ್ನ ಕ್ಷೇತ್ರದಲ್ಲಿ ಕೂಡ ಹಿನ್ನಡೆಯಾಗಿದೆ. ಕೆಲವೊಂದಿಷ್ಟು ಸಚಿವರ ಕ್ಷೇತ್ರದಲ್ಲಿ ಹಿನ್ನಡೆಯಾಗಿದೆ. ಇದರ ಬಗ್ಗೆ ಚರ್ಚೆ ಮಾಡುತ್ತೇವೆ ಎಂದರು. ಬಾಯಿ ಮುಚ್ಚಿದ್ರೆ ಒಳ್ಳೇದುಯಾವುದೇ ಸಚಿವರು ಸೋಲಿನ ಬಗ್ಗೆ ದೂರು ಕೊಟ್ಟಿಲ್ಲ ಎಂದ ಅವರು, ಇದೇ ಸಂದರ್ಭದಲ್ಲಿ ಸಚಿವರ ರಾಜೀನಾಮೆಗೆ ಶಾಸಕ ಬಸವರಾಜ್ ಶಿವಗಂಗಾ ಒತ್ತಾಯ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಶಾಸಕರು ಬಾಯಿ ಮುಚ್ಚಿಟ್ಟುಕೊಂಡಿದ್ರೆ ಒಳ್ಳೆಯದು ಎಂದು ಡಿಕೆಶಿ ಎಚ್ಚರಿಕೆ ನೀಡಿದರು. ಎಐಸಿಸಿಯಿಂದ ಚುನಾವಣೆ ಹಿನ್ನಡೆ ಪರಿಶೀಲನಾ ಸಮಿತಿ ರಚನೆ ವಿಚಾರವಾಗಿ ಮಾತನಾಡಿ, ರಾಹುಲ್ ಗಾಂಧಿ ವರದಿ ನೀಡಲು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ನಾವು ಸಭೆಯನ್ನು ನಡೆಸುತ್ತೇವೆ. ಇವತ್ತು ಬೆಂಗಳೂರು ಶಾಸಕರ ಮೀಟಿಂಗ್ ಕರೆದಿದ್ದೇವೆ. ಎಲ್ಲಿ ತಪ್ಪಾಗಿದೆ ಅಂತ ಪರಿಶೀಲನೆ ಮಾಡುತ್ತೇವೆ. ನಮಗೆ ಎಚ್ಚರಿಕೆ ಗಂಟೆ ಇದು, ನಾವು ಸರಿ ಮಾಡಿಕೊಳ್ಳಬೇಕಿದೆ. ಸೋಲು ಗೆಲುವಿನ ವಿಚಾರವಾಗಿ ಯಾರಿಗೂ ಕೂಡ ಮಾಧ್ಯಮಗಳಿಗೆ ಮಾತನಾಡದಂತೆ ಸೂಚನೆ ನೀಡಿದ್ದೇನೆ ಎಂದರು.
ಶಿವಗಂಗಾ ಬಸವರಾಜ್ ಏನಂದಿದ್ದರು : ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಗೆ ಲೀಡ್ ಕೊಡಿಸದೇ ಇರುವ ಸಚಿವರ ರಾಜೀನಾಮೆಗೆ ದಾವಣಗೆರೆ ಜಿಲ್ಲೆ ಚನ್ನಗಿರಿ ಕ್ಷೇತ್ರದ ಶಾಸಕ ಶಿವಗಂಗಾ ಬಸವರಾಜ್ ಆಗ್ರಹಿಸಿದ್ದರು. ಲೋಕಸಭಾ ಚುನಾವಣೆಯಲ್ಲಿ ಯಾವ ಸಚಿವರು ತಮ್ಮ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಲೀಡ್ ಕಡಿಮೆ ಕೊಡಿಸಿದ್ದಾರೋ ಅಂತವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಿ. ಸಚಿವ ಸ್ಥಾನವನ್ನು ವಜಾಗೊಳಿಸಿ ಹೊಸಬರಿಗೆ ಅವಕಾಶ ಮಾಡಿಕೊಡುವಂತೆ ಒತ್ತಾಯಿಸಿದ್ದರು. ಪಂಚ ಗ್ಯಾರಂಟಿಗಳ ಮೂಲಕ ಕಾಂಗ್ರೆಸ್ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿತ್ತು. ಆಧರೆ ಇದೀಗ ಲೋಕಸಭಾ ಚುನಾವಣೆಯಲ್ಲಿ ಕೇವಲ ೯ ಸ್ಥಾನಗಳನ್ನಷ್ಟೇ ಪಡೆದುಕೊಂಡಿದೆ. ಹಾಗಾಗಿ ತಮ್ಮ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಉತ್ತಮ ಮುನ್ನಡೆ ಕೊಡಿಸಲು ವಿಫಲರಾದ ಸಚಿವರು ರಾಜೀನಾಮೆ ನೀಡಬೇಕು. ನಮಗೆ ವ್ಯಕ್ತಿ ಮುಖ್ಯವಲ್ಲ, ಪಕ್ಷ ಮುಖ್ಯ. ಇಷ್ಟೊದು ಗ್ಯಾರಂಟಿ ನೀಡಿದ್ದರೂ ಹೆಚ್ಚು ಕ್ಷೇತ್ರಗಳಲ್ಲಿ ಗೆದ್ದಿಲ್ಲ. ಹೀಗಾಗಿ ಚುನಾವಣೆಯಲ್ಲಿ ವಿಫಲರಾಗಿರುವ ಸಚಿವರ ರಾಜೀನಾಮೆ ಪಡೆದು ಹೊಸಬರಿಗೆ ಅವಕಾಶ ಮಾಡಿಕೊಡಬೇಕು.ಕಾರ್ಯಕರ್ತರು, ಶಾಸಕರು ಹಗಲಿರುಳು ಕಾರ್ಯ ನಿರ್ವಹಿಸಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಲೀಡ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದೆವು. ಆದರೆ ಸಚಿವರೇ ಎಡವಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಇದಕ್ಕೆ ಈಗ ಡಿಸಿಎಂ ಬಾಯಿಮುಚ್ಚಿಕೊಂಡಿರುವುದು ಉತ್ತಮ ಎಂದು ಎಚ್ಚರಿಕೆ ನೀಡಿದ್ದಾರೆ.